ಗಣೇಶ್ ಕಾಸರಗೋಡು ಸರ್ ಹೀಗೆ ಬರೆಯುತ್ತಾರೆ..
೨೦೨೩ ದಲ್ಲಿ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ನಾಳೆ ಪರಿಹಾರವಾಗಿ ಬಿಡುತ್ತದೆ ಎಂಬ ನಂಬಿಕೆಯೂ ಇಲ್ಲ. ಹಾಗೆ ನೋಡಿದರೆ ಮನಸ್ಸು ಬದಲಾಗದೇ ಈ ಕ್ಷುದ್ರ ಮನಸ್ಥಿತಿಗೊಂದು ಪರಿಹಾರವಿಲ್ಲ...

ಈಗ ನಾನು ಹೇಳಲು ಹೊರಟಿರುವುದು 40 ವರ್ಷಗಳ ಹಿಂದೆ ನಡೆದು ಹೋದ ಘಟಾನುಘಟಿಗಳ ನಡುವಿನ ಪರೋಕ್ಷ ಯುದ್ಧ. ಭಾಷಾ ದ್ವೇಷದ ಜಟ್ಟಿ ಕಾಳಗ. ಕನ್ನಡದ ವರನಟ ಡಾ//ರಾಜಕುಮಾರ್ ಮತ್ತು ಹಿಂದಿ ಚಿತ್ರರಂಗದ ಬಾದಷಾ ಅಮಿತಾಬ್ ನಡುವಿನ ಅಘೋಷಿತ ಭೀಕರ ಯುದ್ಧ. ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಇದು ನಿಜ.

  ಇದು 1983ನೇ ಇಸವಿಯ ಸ್ಟೋರಿ. ಗೋಕಾಕ್ ಚಳುವಳಿ ಪರಾಕಾಷ್ಠೆ ತಲುಪಿದ ಸಂದರ್ಭ. ಕನ್ನಡಿಗರ ಆರಾಧ್ಯ ದೈವ ರಾಜಕುಮಾರ್ ಅವರನ್ನು ಇದ್ದಕ್ಕಿದ್ದಂತೆಯೇ ಮುಂಬಯಿಯ ಪತ್ರಿಕೆಯೊಂದು "ಮಿನಿ ಹಿಟ್ಲರ್" ಎಂದು ಆರೋಪಿಸಿತು. ಆ ಪತ್ರಿಕೆಯ ಹಿಂದೆ ಬಾಲಿವುಡ್ ಬಾದಷಾ ಅಮಿತಾಬ್ ಬಚ್ಚನ್ ಇದ್ದನೆಂಬ ಗುಸುಗುಸು ಸುದ್ದಿ ಹರಡಿತು. ಸುದ್ದಿ ಕಾಡ್ಗಿಚ್ಚಾಯಿತು. ಇಡಿಯ ಕರ್ನಾಟಕ ಹೊತ್ತಿ ಉರಿಯಿತು. ಇದಕ್ಕೆಲ್ಲಾ ಕಾರಣವಾದುದೊಂದು ವರದಿ. ಆ ವರದಿ ಪ್ರಕಟವಾದದ್ದು "ಚಿತ್ರದೀಪ" ಎಂಬ ಹೆಸರಿನ ಸಿನೆಮಾ ಪತ್ರಿಕೆಯಲ್ಲಿ. ಕನ್ನಡದ ವರ ನಟ ಡಾ//ರಾಜಕುಮಾರ್ ಅವರನ್ನು  ಕೆಣಕಿ ಯಾರಾದರೂ ಬಚಾವ ಆಗುವುದುಂಟಾ? ಬಾಲಿವುಡ್ ಬಾದಷಾ ಅಮಿತಾಬ್'ರಂಥಾ ಅಮಿತಾಬ್ ಬಚ್ಚನ್ನೇ ಬಚಾವಾಗಲಿಲ್ಲ ಎನ್ನುವುದೇ ಇಲ್ಲಿನ ವಿಷಯ.

  ಗೋಕಾಕ್ ಚಳುವಳಿ ಮುಗಿಲು ಮುಟ್ಟಿದ ದಿನಗಳವು. ಡಾಃ ರಾಜಕುಮಾರ್ ಖ್ಯಾತಿ ಉತ್ತುಂಗಕ್ಕೇರಿತ್ತು. ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮಾಡಿ, ಕನ್ನಡ ಭಾಷಾ ಜಾಗೃತಿಯುಂಟು ಮಾಡಿದ ವೀರ ಕನ್ನಡಿಗನೆನ್ನುವ ಹಿರಿಮೆ. ಇಡಿಯ ಕನ್ನಡ ಚಿತ್ರರಂಗವೇ ಈ ಹಿರಿಯಣ್ಣನ ಜೊತೆ ಗೋಕಾಕ್ ಚಳುವಳಿಗೆ ಹೆಗಲು ಕೊಟ್ಟಿತ್ತು. ಊರಿಂದೂರಿಗೆ ಪ್ರಯಾಣಿಸುತ್ತಿರುವಾಗ ಜನಜಾತ್ರೆ. ಅದೊಂದು ವೈಭವದ ದಿನಗಳು. ರಾಜಕುಮಾರ ಅಂದರೆ ಮನೆ ಮಾತು. ಹರಸಲು, ಮಾತಾಡಿಸಲು, ಮೈ ಮುಟ್ಟಲು ಬಂದು ಸೇರುವ ಮಂದಿ "ಅಣ್ಣಾವ್ರ" ನ್ನು ದೇವರೆಂದು ನಂಬಿದ ದಿನಗಳವು. ಕೆಲವರಿಗೆ "ಅಣ್ಣ", ಕೆಲವರಿಗೆ "ಕಣ್ಮಣಿ", ಇನ್ನೂ ಕೆಲವರಿಗೆ ಸಾಕ್ಷಾತ್ "ದೇವ್ರು"

 ಇಂಥಾ ಹೊತ್ತಿನಲ್ಲೇ ಹಿಂದಿ ಚಿತ್ರರಂಗದ ಪ್ರಾತಿನಿಧಿಕ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ "ಟ್ರೇಡ್ ಗೈಡ್" ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಯಿತು. ಅದೊಂದು ಸ್ಫೋಟಕ ಸುದ್ದಿ. ಆದರೆ ಆ ಪತ್ರಿಕೆಗೆ ಓದುಗರೇ ಇರಲಿಲ್ಲ. ಏಕೆಂದರೆ ಅದು ಹಿಂದಿ ಚಿತ್ರರಂಗದ ವ್ಯಾವಹಾರಿಕ ಪತ್ರಿಕೆ! ಇಂಥಾದ್ದೊಂದು ಪತ್ರಿಕೆ ಪ್ರಕಟವಾಗುತ್ತಿದೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಅದು ಹಿಂದಿ ಚಿತ್ರರಂಗದ ಇಂಗ್ಲೀಷ್ ಪತ್ರಿಕೆ. ಬಾಲಿವುಡ್'ನ ಆಗುಹೋಗು, ಲಾಭ ನಷ್ಟಗಳ ಲೆಕ್ಕಾಚಾರವನ್ನು ಒಪ್ಪಿಸುವ ಉದ್ಯಮದ ಪತ್ರಿಕೆ. ಹೀಗಾಗಿ ಜನ ಸಾಮಾನ್ಯರಿಗೆ ಅದು ಬೇಕಾಗಿರಲಿಲ್ಲ

 ಆ ಕಾಲವೂ ಕೂಡಿ ಬಂತೆನ್ನಿ. "ಟ್ರೇಡ್ ಗೈಡ್" ಎಂಬ ಈ ಪುಟ್ಟ ಪತ್ರಿಕೆ, ಹೆಚ್ಚು ಸರ್ಕ್ಯುಲೇಶನ್ ಇಲ್ಲದ ಪತ್ರಿಕೆ ಮುಂದೆ ಯಾವ ಮಟ್ಟದಲ್ಲಿ ಸುದ್ದಿ ಮಾಡಿತೆಂದರೆ ಅದನ್ನು ವಿವರಿಸಲು ಪದಗಳಿಲ್ಲ! ಇಷ್ಟಕ್ಕೂ ಆ ಪತ್ರಿಕೆಯಲ್ಲಿ ಪ್ರಕಟವಾದದ್ದಾದರೂ ಏನು?

  "ರಾಜಕುಮಾರ್: ಮಿನಿ ಹಿಟ್ಲರ್" - ಎನ್ನುವ ಟೈಟಲ್' ನಲ್ಲಿ ಪ್ರಕಟವಾದ ಸುದ್ದಿ ಹೀಗಿತ್ತು : "ಗೋಕಾಕ್ ವರದಿ ಜಾರಿ ಹಿನ್ನೆಲೆಯಲ್ಲಿ ನಡೆದ ಚಳುವಳಿಯ ನೇತೃತ್ವ ವಹಿಸಿದ್ದ ಡಾಃ ರಾಜಕುಮಾರ್ ಪರಭಾಷಾ ಚಿತ್ರಗಳಿಗೆ ಕಂಟಕಪ್ರಾಯರಾಗಿದ್ದಾರೆ ಮತ್ತು ಅವರು ಸಾಕ್ಷಾತ್ ಮಿನಿ ಹಿಟ್ಲರ್ ಥರ ವರ್ತಿಸುತ್ತಿದ್ದಾರೆ" ಎನ್ನುವುದು ಆ "ಟ್ರೇಡ್ ಗೈಡ್" ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಸಾರ. ನಂತರ ತಿಳಿದು ಬಂದ ಅಚ್ಚರಿ ಹುಟ್ಟಿಸುವ ವಿಷಯವೆಂದರೆ ಈ ಸುದ್ದಿಯ ಹಿನ್ನೆಲೆಯಲ್ಲಿ ಮುಂಬಯಿ ಬಾದಷಾ ಅಮಿತಾಬ್ ಬಚ್ಚನ್ ಇದ್ದಾರೆ ಎನ್ನುವುದು. ಇದಕ್ಕೂ ಒಂದು ಕಾರಣವಿದೆ : "ಟ್ರೇಡ್ ಗೈಡ್" ಪತ್ರಿಕೆಗೂ ಅಮಿತಾಬನಿಗೂ ಅವಿನಾಭಾವ ಸಂಬಂಧವಿದೆ. ಮತ್ತು ಈ ಸಂಬಂಧದಿಂದಾಗಿಯೇ ಪರೋಕ್ಷವಾಗಿ ಅದೇ ಅಮಿತಾಬನೇ ನಮ್ಮ ರಾಜಕುಮಾರ್ ವಿರುದ್ಧ ಎತ್ತಿ  ಕಟ್ಟಲೆಂದೇ ಈ ಸುದ್ದಿಯನ್ನು ಬರೆಸಿದ್ದಾನೆ ಎನ್ನುವ ವದಂತಿ ಕೂಡಾ ಹರಡಿತು.

 ನಡೆದದ್ದು ಏನಪ್ಪಾ ಅಂದರೆ ಡಾಃ ರಾಜಕುಮಾರ್ ಹೀಗೆ ಕನ್ನಡದ ಗೋಕಾಕ್ ದಂಡಯಾತ್ರೆಗೆ ಹೊರಟಾಗ ಕೆಲವು ಪರಭಾಷಾ ಚಿತ್ರಗಳಿಗೆ ತೊಂದರೆ, ಕಿರಿ ಕಿರಿಯುಂಟಾದದ್ದು ನಿಜ. ಹಿಂದಿ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೂ ತೊಂದರೆಯಾಯಿತು. ಕನ್ನಡಕ್ಕಾಗಿ ಹೊರಾಡುವುದೆಂದರೆ ಪರಭಾಷಾ ಚಿತ್ರಗಳನ್ನು ಧಿಕ್ಕರಿಸುವುದೆಂದರ್ಥವಲ್ಲ. ಆದರೆ ಅನಿವಾರ್ಯವಾಗಿ ಇಂಥಾ ಪ್ರಸಂಗಗಳು ನಡೆದು ಬಿಡುತ್ತವೆ. ಇದಕ್ಕೆ ಇಡಿಯ ಹೋರಾಟದ ನೇತೃತ್ವ ವಹಿಸಿದವರೇ ಕಾರಣ ಎಂಬ ತೀರ್ಮಾನಕ್ಕೆ ಬರುವುದು ನ್ಯಾಯ ಸಮ್ಮತವಲ್ಲ. ಕನ್ನಡ ಚಿತ್ರಗಳಿಗೆ ಸಿಗದ ಥಿಯೇಟರುಗಳ ಮೇಲೆ ಚಳುವಳಿಗಾರರು ಕಣ್ಣಿಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಈ ನಡುವೆ ಬೆಂಕಿಗೆ ತುಪ್ಪ ಸುರಿಸುವಂಥಾ ಕೆಲವು ಘಟನೆಗಳು ನಡೆದೇ ಹೋದುವು. ಅಮಿತಾಬ್ ಬಚ್ಚನ್ ಚಿತ್ರ ತೆರೆ ಕಾಣಬೇಕಿದ್ದ ಚಿತ್ರ ಮಂದಿರವೊಂದರಲ್ಲಿ ಡಾಃ ರಾಜಕುಮಾರ್ ಅವರ ಚಿತ್ರ ತೆರೆ ಕಂಡದ್ದೇ, ಈ ಎಲ್ಲ ಅನಾಹುತಗಳಿಗೆ ಕಾರಣವಾಯಿತು. ಇದು ಉದ್ದೇಶ ಪೂರ್ವಕವಾಗಿ ನಡೆದದ್ದಲ್ಲ. ಅಮಿತಾಬ್ ಬಚ್ಚನ್ ಚಿತ್ರದ ರೀಲುಗಳು ಬಾರದಿರುವುದಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ರಾಜ್ ಚಿತ್ರ ಆ ಥಿಯೇಟರ್'ನಲ್ಲಿ ತೆರೆ ಕಂಡದ್ದು ನಿಜ. ಗಲಾಟೆ, ದೊಂಬಿ ಶುರುವಾದದ್ದೇ ಇಲ್ಲಿಂದ.

 ಇದನ್ನೆಲ್ಲ ಇಟ್ಟುಕೊಂಡು "ಚಿತ್ರದೀಪ" ಪತ್ರಿಕೆ ಒಂದು ವರದಿಯನ್ನು ಪ್ರಕಟಿಸಿದ್ದೇ ತಡ, ಕನ್ನಡದ ಹೋರಾಟಗಾರರಿಗೆ ಒಂದು ಪ್ರಬಲ ಅಸ್ತ್ರ ದೊರೆತಂತಾಯಿತು.. "ಚಿತ್ರದೀಪ" ಮಾರುಕಟ್ಟೆಗೆ ಹೋಯಿತು. ಅಲ್ಲೋಲ ಕಲ್ಲೋಲ. ಕರ್ನಾಟಕದಾದ್ಯಂತ ಹರಡಿಕೊಂಡಿದ್ದ ರಾಜ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ರೊಚ್ಚಿಗೆದ್ದರು. ತಮ್ಮ "ದೊರೆ"ಯನ್ನು ಈ ರೀತಿ ಹೀಯಾಳಿಸಲು ಆ "ಹಿಂದಿ ದೊರೆ"ಗೆ ಹೇಗಾದರೂ ಧೈರ್ಯ ಬಂತೋ ಎನ್ನುವ ಉದ್ವೇಗ. ಕ್ರಮೇಣ ಅಲ್ಲಲ್ಲಿ ಚಳುವಳಿಯ ರೂಪುರೇಷೆ ಕಾಣಿಸಿಕೊಂಡಿತು. ಕನ್ನಡ ಸಂಘಟನೆಗಳು ರಾಜ್ ಅಭಿಮಾನಿಗಳ ಸಂಘದ ಜೊತೆ ಕೈ ಜೋಡಿಸಿದವು. ಆಗ ತಾನೇ ಗೋಕಾಕ್ ವರದಿ ಜಾರಿಯ ವಿಷಯದಲ್ಲಿ ಕರ್ನಾಟಕದಾದ್ಯಂತ ಕನ್ನಡದ ಕಹಳೆ ಊದಿದ ರಾಜ್ ಪರವಾಗಿ ಇಡಿಯ ಕರ್ನಾಟಕದ ಕನ್ನಡಿಗರು ಎದ್ದು ನಿಂತರು. ಅಮಿತಾಬನ ಪೋಸ್ಟರ್'ಗಳಿಗೆ ಸೆಗಣಿ ಹಚ್ಚಲಾಯಿತು. ಬ್ಯಾನರ್ ಚಿಂದಿಯಾದುವು. ಚಿತ್ರಮಂದಿರಗಳಲ್ಲಿ ಅಮಿತಾಬ್ ಸಿನೆಮಾ ನಡೆಯದಂತೆ ತಡೆ ಹಿಡಿಯಲಾಯಿತು. ಎಲ್ಲೆಲ್ಲೂ ಅಮಿತಾಬ್ ವಿರುದ್ದದ ಕೂಗು ಮುಗಿಲು ಮುಟ್ಟಿತು. ಕ್ರಮೇಣ ಇದು ಹಿಂದಿ ಚಿತ್ರಗಳನ್ನು ಬ್ಯಾನ್ ಮಾಡುವ ಮಟ್ಟಕ್ಕೆ ಬಂದು ಮುಟ್ಟಿತು. ಅದರಲ್ಲೂ ಅಮಿತಾಬ್'ನ ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆರೆ ಕಾಣದಂತೆ ತಡೆ ಹಿಡಿಯಲಾಯಿತು. ಕನ್ನಡ ಜನತೆ ಖಡಾಖಂಡಿತವಾಗಿ ಅಮಿತಾಬ್'ನ ಚಿತ್ರಗಳ ಮೇಲೆ ಬ್ಯಾನ್ ಹೇರಿದರು. ದಿನ ಪತ್ರಿಕೆಗಳಿಗೆ ಸುದ್ದಿಯ ಗ್ರಾಸ. ಕ್ರಮೇಣ ಈ ಗಲಾಟೆಯ ಬಿಸಿ ಹಿಂದಿ ಚಿತ್ರರಂಗಕ್ಕೆ ತಲುಪಿತು. ಎಲ್ಲರೂ ಜಾಗೃತರಾದರು. ಮೊದಲ ಹಂತವಾಗಿ ಅವರವರಲ್ಲೇ ಮಾತುಕತೆ ನಡೆಯಿತು. ನಂತರ ಅಮಿತಾಬ್'ನನ್ನು ಖುದ್ದಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿನಂತಿಸಿಕೊಳ್ಳಲಾಯಿತು. 

 ಆಗ ಎಂಟ್ರಿ ಕೊಟ್ಟದ್ದೇ ರಾಮನಾಥನ್!  ಈ ರಾಮನಾಥನ್ ಬೇರೆ ಯಾರೂ ಅಲ್ಲ : "ರಾಶಿ" ಸೋದರರಲ್ಲಿ ಒಬ್ಬರು. ನಟ ಶರಪಂಜರ ಶಿವರಾಂ ಅವರ ಸೋದರ. ಆಗ ಹಿಂದಿ ಚಿತ್ರರಂಗದಲ್ಲಿ ಇವರದ್ದು ದೊಡ್ಡ ಹೆಸರು.ಅಮಿತಾಬ್ ಬಚ್ಚನ್ ಇವರಿಗೆ ಚೆಡ್ಡಿ ದೋಸ್ತ್ ಥರಾ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಿಂದಿ ಚಿತ್ರರಂಗದ ಮನ ಗೆದ್ದಿರುವ ರಾಮನಾಥನ್ ತಮ್ಮ "ಬಾಂಬೆ ಟು ಗೋವಾ" ಚಿತ್ರದ ಮೂಲಕ ಅಮಿತಾಬನಿಗೊಂದು ಹೊಸ ಇಮೇಜ್ ಸೃಷ್ಟಿಸಿಕೊಟ್ಟಿದ್ದರು. ರಾಮನಾಥನ್ ಹೆಸರು ಕೇಳಿದರೆ ಸಾಕು ಅಮಿತಾಬ್ ಎದ್ದು ನಿಲ್ಲುತ್ತಿದ್ದ ಕಾಲವದು. "ಬಾಂಬೆ ಟು ಗೋವಾ" ಹಿಂದಿ ಚಿತ್ರ ಸಿಲ್ವರ್ ಜೂಬಿಲಿ ಕಂಡಿತ್ತು.ಇದೇ ರಾಮನಾಥನ್ ನಿರ್ಮಿಸಿದ "ಗಂಗಾ ಜಮುನಾ ಸರಸ್ವತಿ" ಚಿತ್ರದಲ್ಲಿ ಅಮಿತಾಬ್, ಮೀನಾಕ್ಷಿ ಶೇಷಾದ್ರಿ, ಮಿಥುನ್ ಚಕ್ರವರ್ತಿ, ಜಯಪ್ರದಾ ಮೊದಲಾದ ಅತಿರಥ ಮಹಾರಥರೆಲ್ಲಾ ನಟಿಸಿದ್ದರು. ಇಂಥಾ ಪ್ರತಿಷ್ಠಿತ ನಿಮಪಕರೊಬ್ಬರು ಕನ್ನಡ ಮತ್ತು ಹಿಂದಿ ಚಿತ್ರರಂಗದ ರಾಯಭಾರಿಯಂತೆ ಇದ್ದುದರಿಂದ ಇವರನ್ನೇ ಈ ಭಾಷಾ ಸೂಕ್ಷ್ಮ ವಿಚಾರದ ಗೊಂದಲವನ್ನು ಶಮನಗೊಳಿಸಲು ಉಪಯೋಗಿಸಿ ಕೊಳ್ಳುವುದೆಂದು ಹಿಂದಿ ಚಿತ್ರರಂಗ ನಿರ್ಧರಿಸಿತು. ಇದು ಅಮಿತಾಬನಿಗೂ ಒಪ್ಪಿಗೆಯಾಯಿತು.

  ರಾಜಕುಮಾರ್ ಕುಟುಂಬವನ್ನು ರಾಮನಾಥನ್ ಸಂಪರ್ಕಿಸಿದರು. ಹೀಗೆಲ್ಲಾ ನಡೆಯಬಾರದಿತ್ತು ಎಂದರು. ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. "ಟ್ರೇಡ್ ಗೈಡ್" ಗೂ ಅಮಿತಾಬ್'ಗೂ ಪರಸ್ಪರ ಸಂಬಂಧವೇ ಇಲ್ಲವೆಂದು ಒತ್ತಿ ಹೇಳಿದರು. ಕಣ್ತಪ್ಪಿನಿಂದಾದ ಅನಾಹುತಕ್ಕೆ ಅಮಿತಾಬ್ ಪರವಾಗಿ  ಕ್ಷಮೆಯಾಚಿಸಿದರು. ಕೊನೆಯಲ್ಲಿ ಅಮಿತಾಬ್ ಬಚ್ಚನ್ ಡಾಃ ರಾಜಕುಮಾರ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು ಎನ್ನುವ ಸೂಕ್ಷ್ಮವನ್ನು ರಾಜ್ ಕುಟುಂಬಕ್ಕೆ ತಿಳಿಸಿದರು. ಈ ಬಗ್ಗೆ ಒಂದು ದೊಡ್ಡ ಚರ್ಚೆಯೇ ನಡೆದು ಹೋಯಿತು. ರಾಮನಾಥನ್ ಅವರ ರಾಯಭಾರ ಕೆಲಸ ಯಶಸ್ವಿಯಾಯಿತು. ಅಮಿತಾಬ್'ರನ್ನು ಭೇಟಿಯಾಗಲು ರಾಜ್ ಕುಟುಂಬ ಒಪ್ಪಿತು. ಈ ಧನ್ಯ ಮಿಲನ ನಡೆಯುವುದು ಬೆಂಗಳೂರಿನ ಅರಮನೆಯಲ್ಲಿ ಎಂದು ನಿಗದಿಯಾಯಿತು. ವಾರವೊಂದರಲ್ಲೇ ಅಮಿತಾಬ್ ವಿಮಾನದಲ್ಲಿ ಹಾರಿ ಬಂದು ಅರಮನೆ ಸೇರಿಕೊಂಡರು. ಅದೇ ಹೊತ್ತಿಗೆ ರಾಜಕುಮಾರ್, ಪಾರ್ವತಮ್ಮ, ರಾಮನಾಥನ್ ಮತ್ತು ಅಮಿತಾಬ್ ಅವರ ಹಾರ್ಡ್ ಕೋರ್ ಫ್ಯಾನ್ ಆಗಿದ್ದ ಪುಟ್ಟ ಪುನೀತ್ ರಾಜಕುಮಾರ್ ಅಲ್ಲಿಗೆ ಬಂದು ಸೇರಿಕೊಂಡರು. ಕನ್ನಡದ ಕಂದ ರಾಜಕುಮಾರ್ ಮತ್ತು ಹಿಂದಿ ಬಾದಷಾ ಅಮಿತಾಬ್ ಬಚ್ಚನ್ ಪರಸ್ಪರ ಕೈ ಕುಲುಕಿಕೊಂಡರು. ಹಾರ ಹಾಕಿಕೊಂಡರು. ಸಿಹಿ ಹಂಚಿ ತಿಂದರು. ಫೋಟೋ ಹೊಡೆಸಿಕೊಂಡರು. ಪುಟ್ಟ ಕಂದ ಪುನೀತನನ್ನು ಎತ್ತಿ ಮುದ್ದಾಡಿದರು ಅಮಿತಾಬ್.

 ಕೊನೆಯಲ್ಲಿ ಒಂದು ಪುಟ್ಟ ಮಾಹಿತಿ ನಿಮಗಾಗಿ : ಅಂದು "ಚಿತ್ರದೀಪ" ಪತ್ರಿಕೆಯಲ್ಲಿ "ಟ್ರೇಡ್ ಗೈಡ್" ಪತ್ರಿಕೆಯ ಸ್ಫೋಟಕ ಸುದ್ದಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದು ಬೇರೆ ಯಾರೂ ಅಲ್ಲ, ಅಂದಿನ ಯುವ ಪತ್ರಕರ್ತರಾದ ಮತ್ತು ಇಂದಿನ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ಬಿ.ಎನ್.ಸುಬ್ರಹ್ಮಣ್ಯ....!!!

       ಇದಕ್ಕೆ ಹೇಳುವುದು ಡಾ.ರಾಜ್ ಕನ್ನಡಿಗರ ಆರಾಧ್ಯದೈವವೆಂದು... ಕೆಚ್ಚೆದೆಯ ಕನ್ನಡಿಗನೆಂದು..(ಕೃಪೆ:ಮಲ್ಲಿಕಾರ್ಜುನ ಮೇಟಿ ಫೇಸ್‌ಬುಕ್‌)

LEAVE A REPLY

Please enter your comment!
Please enter your name here