ದಾವಣಗೆರೆ:ಬ್ಯಾಂಕ್ ನೌಕರರ ದಶಕಗಳ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು, ಸರಕಾರ ಏಕಪಕ್ಷೀಯವಾಗಿ ಜಾರಿಗೆ ತಂದಿರುವ ತಾರತಮ್ಯಪೂರಿತ ಪ್ರೋತ್ಸಾಹ ಧನ ಯೋಜನೆಯನ್ನು ಹಿಂಪಡೆಯಬೇಕು ಹಾಗೂ ಬಾಕಿ ಉಳಿದಿರುವ ನಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸಿ ಯುಎಫ್‌ಬಿಯು – ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯು ಸೆಪ್ಟೆಂಬರ್ 11 ರಂದು ಕರೆ ನೀಡಿದ ಒಂದು ದಿನದ ಅಖಿಲ ಭಾರತ ಬ್ಯಾಂಕ್ ಮುಷ್ಕರ ಯಶಸ್ವಿಯಾಗಿ ನಡೆಯಿತು ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಮತ್ತು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.

ಮುಷ್ಕರದ ಅಂಗವಾಗಿ ಇಂದು ದಾವಣಗೆರೆಯ ಜಿಲ್ಲೆಯ ಬ್ಯಾಂಕ್ ಉದ್ಯೋಗಿಗಳು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಡಿಪೇಟೆ ಶಾಖೆಯ ಮುಂದೆ ಜಮಾಯಿಸಿ ಕೇಂದ್ರ ಸರಕಾರ ಮತ್ತು ಹಣಕಾಸು ಇಲಾಖೆಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ ಮಾತನಾಡಿ ಬ್ಯಾಂಕ್ ಉದ್ಯೋಗಿಗಳ 5 ದಿನಗಳ ಬ್ಯಾಂಕಿಂಗ್ ಪದ್ಧತಿಯ ಬೇಡಿಕೆಯ ಬಗ್ಗೆ ಕಳೆದೊಂದು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ‌ ನಡುವೆ ದಿನಾಂಕ 08.03.2024 ರಂದು ಒಪ್ಪಂದವಾಗಿದೆ. ಆದರೆ ಎರಡೂವರೆ ವರ್ಷಗಳೇ ಕಳೆದರೂ ಬೇಡಿಕೆ ಇನ್ನೂ ಈಡೇರಿಲ್ಲ. ಬ್ಯಾಂಕ್ ಉದ್ಯೋಗಿಗಳ ಸಹನೆಯ ಕಟ್ಟೆ ಒಡೆದು ಮುಷ್ಕರದ ಹಾದಿ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿ ಆಗುತ್ತಿಲ್ಲ. ವಾರದ ದಿನಗಳಲ್ಲಿ ನೌಕರರು ರಾತ್ರಿ ಹತ್ತಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂದರೆ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೇ ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಹಲವಾರು ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದ ಇಲಾಖೆಗಳು ವಾರಕ್ಕೆ ಐದು ದಿನ ಮಾತ್ರವೇ ಕೆಲಸ ಮಾಡುತ್ತಿವೆ‌. ಜಾಗತಿಕ ಮಟ್ಟದಲ್ಲೂ ಅಮೇರಿಕಾ, ಇಂಗ್ಲೆಂಡ್, ಕೆನಡಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ರಷ್ಯಾ, ಬ್ರೆಜಿಲ್, ಸೌತ್ ಆಫ್ರಿಕಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತಿತರ ಅನೇಕ ರಾಷ್ಟ್ರಗಳಲ್ಲಿ 5 ದಿವಸದ ಬ್ಯಾಂಕಿಂಗ್ ಪದ್ಧತಿಯೇ ಜಾರಿಯಲ್ಲಿದೆ. ಹೀಗಿದ್ದರೂ ಸಹ ಕೇಂದ್ರ ಹಣಕಾಸು ಇಲಾಖೆ ಅನಗತ್ಯವಾಗಿ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋತಿದೆ. ಆದ್ದರಿಂದ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಅನಿವಾರ್ಯವಾಗಿದೆ. ಇಂದಿನ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸರಕಾರವು ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸದೇ ಹೋದಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ 3 ದಿನಗಳ ಮತ್ತು ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿಯ ಮುಷ್ಕರವನ್ನು ನಡೆಸುತ್ತೇವೆ ಎಂದು ಕೆ.ರಾಘವೇಂದ್ರ ನಾಯರಿ ಹೇಳಿದರು.

ಸೆಪ್ಟೆಂಬರ್ 12, 13 ಮತ್ತು 14 ರಂದು ಬ್ಯಾಂಕ್ ರಜೆ ಇರುವುದರಿಂದ ಇಂದಿನ ಬ್ಯಾಂಕ್ ಮುಷ್ಕರವು ಖಂಡಿತವಾಗಿ ಸಾರ್ವಜನಿಕರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೇ ನೇರವಾಗಿ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಬ್ಯಾಂಕ್ ಕಾರ್ಮಿಕ ಮುಖಂಡ ಸುನಿಲ್ ಮ್ಯಾಗೇರಿ ತಿಳಿಸಿದರು.

ಪ್ರದೀಪ್ ಪಾಟೀಲ ಮಾತನಾಡಿ ಸರಕಾರವು ಜಾರಿಗೆ ತಂದಿರುವ ಕಾರ್ಯಕ್ಷಮತೆಯ ಆಧಾರಿತ ಪ್ರೋತ್ಸಾಹ ಧನ ಯೋಜನೆಯು ತಾರತಮ್ಯ ಮತ್ತು ದೋಷಪೂರಿತವಾಗಿದೆ. ಬ್ಯಾಂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಶೇಕಡಾ 95 ರಷ್ಟು ಉದ್ಯೋಗಿಗಳ ಹಿತವನ್ನು ಕಡೆಗಣಿಸಿ ಶೇಕಡಾ 5 ರಷ್ಟಿರುವ ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡುವ ಯೋಜನೆಯು ಬಹುಸಂಖ್ಯಾತ ಉದ್ಯೋಗಿಗಳಿಗೆ ಶಾಪವಾಗಿದೆ. ಹಾಗಾಗಿ ಈ ಯೋಜನೆಯನ್ನು ಹಿಂಪಡೆದು ಯುಎಫ್‌ಬಿಯು ಜೊತೆಗೆ ಮಾತುಕತೆ ನಡೆಸಿ ಸುಧಾರಿತ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಅಗ್ರಹಿಸಿದರು.

ಮುಷ್ಕರದ ನೇತೃತ್ವವನ್ನು ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ್ ಬಿಲ್ಲವ, ಸುನಿಲ್ ಮ್ಯಾಗೇರಿ, ಪ್ರದೀಪ್ ಪಾಟೀಲ, ಮಹೇಶ ಟಿ ದೊಡ್ಡಮನಿ, ಎಂ.ಪಿ.ಕಿರಣಕುಮಾರ್, ಕೆ.ವಿಜಯಕುಮಾರ್, ಎಂ.ಶಮಂತ್, ಸಾಗರ್ ಜೋಶಿ, ನಾಗರಾಜ್ ನಾಶಿ, ಆರ್.ಆಂಜನೇಯ, ಹೆಚ್.ಎಸ್.ತಿಪ್ಪೇಸ್ವಾಮಿ, ಶಿವರಾಮಕೃಷ್ಣನ್, ಸಂಧ್ಯಾ ಜಿ.ಎಸ್, ಗಿರೀಶ್ ಎಂ.ಹೆಚ್., ಸಿದ್ಧಾರ್ಥ್ ಸಿಂಗ್, ಶೋಭಾ ದಿವಾಕರ್, ದುರ್ಗಪ್ಪ ಸಿ, ವಿಶ್ವಚೇತನ್, ಅನುರಾಧಾ ಮುತಾಲಿಕ್, ದೀಪಾ ಗುಡಿ, ಅನಿಲ್ ಕುಮಾರ್, ಬಸವರಾಜ್ ಜಿ.ಟಿ, ರಶ್ಮಿ ಎಸ್, ಮಧುಸ್ವಿನಿ ದೇಸಾಯಿ, ಅನಿಲ್ ಕುಮಾರ್, ಮಹಮದ್ ರಫಿ, ಎಂ‌.ಎಂ.ಸಿದ್ದಲಿಂಗಯ್ಯ, ಪರಶುರಾಮ್, ಶಂಭು ಹಿರೇಮಠ, ಎಂ.ಡಿ.ವಿದ್ಯಾಸಾಗರ್, ಅಣ್ಣಪ್ಪ ನಂದಾ, ಆಕನೂರು ತಿಪ್ಪೇಸ್ವಾಮಿ, ಸೈಯದ್ ಚಾಂದಬಾಷಾ, ಆಶಾ ಹೆಚ್.ಜೆ, ಶೃತಿ ಪತ್ತಾರ್, ಸುಮನಾ, ಅನ್ನಪೂರ್ಣ, ಶೈಲಜಾ ಹೆಚ್., ಮಂಜಮ್ಮ, ಶ್ರೀಧರ್ ಪೆರೂರು, ಜ್ಞಾನೇಶ್ವರ ಮಾಲವಾಡೆ, ಉಷಾ ಎನ್.ಜಿ.ನಾಗರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here