ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಸಚಿವರಾದ ಪೀಯೂಷ್ ಗೋಯಲ್ ನೇತೃತ್ವದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಮಂಡಳಿಯ 3ನೇ ಮೇಲುಸ್ತುವಾರಿ ಪ್ರಾಧಿಕಾರದ ಸಭೆಯಲ್ಲಿ ವರ್ಚುಯಲ್ ಆಗಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಮಾತನಾಡಿದರು.
ತುಮಕೂರನ್ನು ಬೆಂಗಳೂರಿನ ನಂತರದ ಕೈಗಾರಿಕಾ ತಯಾರಿಕೆಯ ನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ 1,736 ಎಕರೆಯನ್ನು ಮೀಸಲಿಟ್ಟಿದ್ದು, ಇದರಿಂದ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಹರಿದು ಬರಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ನ ತುಮಕೂರು ನೋಡ್ ನಲ್ಲಿ ಈಗಾಗಲೇ ಶೇ.30ರಷ್ಟು ಭೌತಿಕ ಪ್ರಗತಿ ಮತ್ತು ಶೇ.20ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಇಲ್ಲಿ 300 ಎಕರೆ ಭೂಮಿಯನ್ನು ಜಪಾನ್ ಟೌನ್-ಶಿಪ್ ಗೆ ಮತ್ತು 200 ಎಕರೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಂಜೂರು ಮಾಡಲಾಗಿದೆ. ತುಮಕೂರು ನೋಡ್ ಅಭಿವೃದ್ಧಿಯಿಂದ 88 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ.
ಭೂಸ್ವಾಧೀನ ಸುಗಮವಾಗಿ ನಡೆಯುತ್ತಿದ್ದು, 2027ರಲ್ಲಿ ಯೋಜನೆಯನ್ನು ಮುಗಿಸಲಾಗುವುದು. ಈ ನೋಡ್ನಲ್ಲಿ ಆಹಾರ ಮತ್ತು ಪಾನೀಯ, ಜವಳಿ ಮತ್ತು ಉಡುಪು, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಜನರಲ್ ಎಂಜಿನಿಯರಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಆದ್ಯತೆ ಕೊಡಲಾಗುವುದು.
ಇದೇ ರೀತಿಯಲ್ಲಿ ಕಲಬುರಗಿಗೆ ಮಂಜೂರಾಗಿರುವ ಪಿಎಂ ಮಿತ್ರ ಕೈಗಾರಿಕಾ ಪಾರ್ಕ್ ಮತ್ತು ‘ಭವ್ಯ’ ಯೋಜನೆಯಡಿ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳನ್ನು ಕೂಡ ಶೀಘ್ರ ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಸಭೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಶ್ರೀ ನಕುಲ್, ಕೆಐಎಡಿಬಿ ಸಿಇಒ ಶ್ರೀ ಗೋವಿಂದ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ನನ್ನೊಂದಿಗೆ ಉಪಸ್ಥಿತರಿದ್ದರು





