ಹಾಸನ:ನಾಡಹಬ್ಬ ಮೈಸೂರು ದಸರಾವನ್ನು ಉಧ್ಘಾಟಿಸಲು ನಾಡಿನ ಹಿರಿಯ ಸಾಹಿತಿ, ತಮ್ಮ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡದ ಕೀರ್ತಿಯನ್ನ ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಶ್ರೀಮತಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಮಾತ್ರವಲ್ಲ ಈ ಮೂಲಕ ಸರ್ಕಾರ ಸೂಕ್ತ ಗೌರವವನ್ನು ನೀಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನವೇ ಹೊರತು ಅದೊಂದು ಧಾರ್ಮಿಕ ಅಲ್ಲ. ಹಾಗಾಗಿ ವಿಶ್ವವಿಖ್ಯಾತ ಕರ್ನಾಟಕದ ಸಾಂಸ್ಕೃತಿಕ ಉತ್ಸವ ಮೈಸೂರು ದಸರಾವನ್ನು ಕನ್ನಡ ನಾಡಿನ ಸಾಹಿತ್ಯದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಂದ ಉದ್ಘಾಟಿಸುವುದು ಅತ್ಯಂತ ಸಮಯೋಚಿತವಾಗಿದೆ. ಈ ಸಂದರ್ಭದಲ್ಲಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅಲ್ಲದೆ ಬೇರೆ ಯಾವುದೇ ಆಯ್ಕೆ ಸೂಕ್ತವಾಗುವುದಿಲ್ಲ. ಸರಕಾರದ ಈ ನಿರ್ಧಾರವನ್ನು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತದೆ.

ಇದೇ ಸಂದರ್ಭದಲ್ಲಿ ಬಿಜೆಪಿಯ ಕೆಲ ಮುಖಂಡರು ಬಾನು ಅವರ ಆಯ್ಕೆಯ ವಿರುದ್ಧ ಮಾತನಾಡಿದ್ದಾರೆ. ದಸರಾವನ್ನು ರಾಜ್ಯ ಸರ್ಕಾರದ ಕೋಟ್ಯಾಂತರ ರೂಗಳ ಅನುದಾನದಲ್ಲಿ ಸಂಘಟಿಸಲಾಗುತ್ತದೆ. ಅಂದರೆ ಅದು ನೇರವಾಗಿ ಈ ರಾಜ್ಯದ ಜನತೆಯ ತೆರಿಗೆಯ ಹಣ. ಕರ್ನಾಟಕ ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಸೇರಿಲ್ಲ. ರಾಷ್ಟçಕವಿ ಕುವೆಂಪು ಅವರು ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟ. ರಾಜ ಪ್ರಭುತ್ವವನ್ನು ಕೊನೆಗಾಣಿಸಿ ನಾವಿಂದು ಭಾರತದ ಸಂವಿಧಾನದ ಅಡಿಯಲ್ಲಿ, ಅದರ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲಾಗದ ಬಿಜೆಪಿ ನಾಯಕರು ರಾಜ್ಯದ ಸೌಹಾರ್ದತೆಗೆ ಕೊಳ್ಳಿ ಇಡಲು ಹುನ್ನಾರ ನಡೆಸಿದ್ದಾರೆ. ಇದನ್ನು ಸಿಪಿಐಎಂ ತೀರ್ವವಾಗಿ ಖಂಡಿಸುತ್ತದೆ.

ಕನ್ನಡದ ಕಂಪು ಬಾನು ಮುಷ್ತಾಕ್ ಅವರ ಮೂಲಕ ಅಂತರಾಷ್ಟ್ರೀಯವಾಗಿ ಪಸರಿಸಿದಾಗ ಅವರು ಮುಸ್ಲಿಂ ಸಮುದಾಯವರು ಎಂಬ ಕಾರಣಕ್ಕಾಗಿ ಒಂದು ಅಭಿನಂದನೆಯನ್ನೂ ಸಲ್ಲಿಸದ ಇವರು ಭಾರತದ ಜಾತ್ಯಾತೀತ ಪರಂಪರೆಯ ವಿರೋಧಿಗಳು. ಬಿಜೆಪಿ ಆರಂಭದಿಂದಲೂ ತನ್ನ ಸಿದ್ದಾಂತವನ್ನೇ ಮಹಿಳಾ ವಿರೋಧಿಯಾಗಿ, ಅಲ್ಪಸಂಖ್ಯಾತ ವಿರೋಧಿಯಾಗಿ, ದಲಿತ ವಿರೋಧಿಯಾಗಿ ರೂಪಿಸಿಕೊಂಡು ಬಂದಿದೆ ಮತ್ತು ಅದರ ಆಧಾರದಲ್ಲೇ ಕೀಳು ರಾಜಕಾರಣ ಮಾಡುತ್ತಿದೆ. ಆದರೆ ರಾಜ್ಯದ ಜನತೆ ಇಂತಹ ಕೀಳು ರಾಜಕಾರಣಕ್ಕೆ ಎಂದಿಗೂ ಬೆಲೆಕೊಟ್ಟವರಲ್ಲಾ…

ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುವ ನಾಡ ಹಬ್ಬ ತನ್ನ ಸೌಹಾರ್ದ ಪರಂಪರೆಯನ್ನ ಮುಂದುವರೆಸಲಿ.. ಇದೇ ದಸರಾವನ್ನ 2017 ರಲ್ಲಿ ಕವಿ ನಿಸಾರ್ ಅಹಮದ್ ಅವರು ಉಧ್ಘಾಟಿಸಿದ್ದಾರೆ. ಆಗಲೂ ನಾಡಿನ ಜನ ಸಂಭ್ರಮಿಸಿದ್ದಾರೆ.

ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡವುದನ್ನು ವಿರೋಧಿಸುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳು ನಿಜವಾಗಿಯೂ ಕರ್ನಾಟಕ ಹಾಗೂ ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆಯ ವಿರೋಧಿಗಳು ಎಂದು ನಿರೂಪಿಸುತ್ತಿದ್ದಾರೆ. ಸರಕಾರ ಇಂತಹ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ವಿರೋಧಿಗಳಿಗೆ ಮಣಿಯಬಾರದು ಹಾಗೂ ಅಂತಹ ದುಷ್ಟಶಕ್ತಿಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸುತ್ತದೆ.

ಹಾಸನದವರಾದ ಬಾನು ಮುಷ್ತಾಕ್ ಆರಂಭದಿಂದಲೂ ಸಮಾಜದಲ್ಲಿನ ಅನ್ಯಾಯ, ಶೋಷಣೆಗಳ ವಿರುದ್ಧ ನಿರಂತರವಾಗಿ ದನಿ ಎತ್ತಿದವರು ಮತ್ತು ಆ ಕುರಿತೇ ತಮ್ಮ ಉತ್ಕೃಷ್ಟ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸಿದವರು. ಬಾನು ಮುಷ್ತಾಕ್ ಅವರ ಜೊತೆಗೆ ಪಕ್ಷ ನಿಲ್ಲುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here