ವಿಜಯಪುರ:ಜೀವ ಉಳಿಸಬೇಕಾದ ಆಂಬುಲೆನ್ಸ್ಗಳೇ ರಸ್ತೆಯ ಗುಂಡಿಗಳಲ್ಲಿ ಜಟಕೆಯಾಗುವ ಪರಿಸ್ಥಿತಿ ಬಂದರೆ ಅದರ ಹೊಣೆ ಯಾರು..? ಆಸ್ಪತ್ರೆಗೆ ತುರ್ತಾಗಿ ಸಾಗುವ ರೋಗಿ ಮಧ್ಯದಲ್ಲೇ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದರೆ ಜವಾಬ್ದಾರಿ ಯಾರದ್ದು..? ತೆರಿಗೆ ಕಟ್ಟುವ ಜನರಿಗೆ ಇದೇನಾ ನಗರಸಭೆಯ ಅಭಿವೃದ್ಧಿಯ ಮಾದರಿ..?
ಸಿಂದಗಿ ನಗರದ ಬಸ್ ನಿಲ್ದಾಣದ ಸಮೀಪ ಖಾಸಗಿ ಆಸ್ಪತ್ರೆಗಳಿರುವ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿ . ಈ ರಸ್ತೆಯಲ್ಲಿ ಪ್ರತಿದಿನ ಆಂಬುಲೆನ್ಸ್ಗಳು, ಗರ್ಭಿಣಿಯರು, ವೃದ್ಧರು, ಶಾಲಾ ಮಕ್ಕಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ಗಂಭೀರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಬದಲು ನಗರಸಭೆ ಕೇವಲ ತೇಪೆ ಹಚ್ಚಿ ಕೈ ತೊಳೆದುಕೊಳ್ಳುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷವಾಗಿ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಇದು ಜೀವದ ಪ್ರಶ್ನೆಯಾಗಿ ಪರಿಣಮಿಸಿದೆ. “ಒಂದು ವೇಳೆ ಆಂಬುಲೆನ್ಸ್ನಲ್ಲಿರುವ ರೋಗಿಯ ಜೀವಕ್ಕೆ ಏನಾದರೂ ಅನಾಹುತವಾದರೆ ಅದರ ಹೊಣೆ ಯಾರು ಹೊರುತ್ತಾರೆ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
“ದೊಡ್ಡ ದುರಂತ ಸಂಭವಿಸಿದ ಬಳಿಕವೇ ನಗರಸಭೆ ಎಚ್ಚೆತ್ತುಕೊಳ್ಳಲಿದೆಯೇ? ಜನರ ಜೀವಕ್ಕಿಂತ ತಾತ್ಕಾಲಿಕ ತೇಪೆ ಕಾಮಗಾರಿಯೇ ಮುಖ್ಯವೇ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗಳಿರುವ ಈ ಪ್ರಮುಖ ರಸ್ತೆಯನ್ನು ಆದ್ಯತೆಯ ಮೇರೆಗೆ ಕೂಡಲೇ ದುರಸ್ತಿ ಮಾಡಿ, ಅನಾಹುತ ಸಂಭವಿಸುವ ಮುನ್ನವೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಸ್ಥಳೀಯರು ನಮ್ಮ ಮಾಧ್ಯಮದ ಮುಖಾಂತರ ಒತ್ತಾಯಿಸಿದ್ದಾರೆ
ನಗರಸಭೆ ಅಧಿಕಾರಿಗಳು ಜನರ ನೋವು ಮತ್ತು ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿ, ಈ ರಸ್ತೆಯನ್ನು ಕೂಡಲೇ ಸಂಪೂರ್ಣವಾಗಿ ದುರಸ್ತಿ ಮಾಡುವ ಮೂಲಕ ಸಾರ್ವಜನಿಕರ ಜೀವ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ.
(ವರದಿ ಜಹೀರ್ ಮುಲ್ಲಾ ಸಿಂದಗಿ)





