ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭೋವಿ ಸಮುದಾಯದ ಕುಲಗುರು ಶರಣಬಸವ ಅಪ್ಪಂಗಳ್ ಅವರ ಕುಟೀರವನ್ನು ಉದ್ಘಾಟಿಸಿ, ಶಿಲಾಮಂಟಪದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು KPSC ಸದಸ್ಯರನ್ನಾಗಿಸುವುದಕ್ಕೆ ನನ್ನ ಸಹಮತವಿದೆ.
ಭೋವಿ ಅಭಿವೃದ್ಧಿ ನಿಗಮ ಮಾಡುವ ಭರವಸೆ ನೀಡಿ, ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ. ಈಗಲೂ ನಿಮ್ಮ ಬೇಡಿಕೆ ಈಡೇರಿಸಲು ನಾನು ಸಿದ್ಧನಿದ್ದೇನೆ.
ಭೋವಿ ಸಮಾಜದ ಹಿತ ಕಾಯುವ ಪಕ್ಷ ನಮ್ಮದು. ನಾನು ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ನಮಗಿರಲಿ. ನಾನು ಸಿದ್ದರಾಮೇಶ್ವರರ ವಚನಗಳಲ್ಲಿ, ಆಶಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ.
ಬಸವಣ್ಣನವರಿಗಿಂತ ಮೊದಲು ಧರ್ಮ ಬೋಧನೆ ಜನರ ಭಾಷೆಯಲ್ಲಿ ಆಗುತ್ತಿರಲಿಲ್ಲ. ಶರಣರು ಬಂದ ಬಳಿಕ ಜನರ ಭಾಷೆಯಲ್ಲಿ ಧಾರ್ಮಿಕ ಬೋಧನೆ ಶುರುವಾಯಿತು. ಜನರಿಗಾಗಿ ಧರ್ಮ ಇರುವುದು. ಧರ್ಮಕ್ಕಾಗಿ ನಾವು ಇರುವುದಲ್ಲ ಎಂದು ಸ್ಪಷ್ಟಪಡಿಸಿ ಮೌಡ್ಯ ಕಂದಾಚಾರಗಳ, ಜಾತಿಯನ್ನು ಬಿಡಬೇಕು ಎನ್ನುವುದು ಶರಣರ, ವಚನಕಾರರ ಆಶಯವಾಗಿತ್ತು. ಇದನ್ನು ಆಚರಿಸುವವರೇ ನಿಜ ಶರಣರು.