ತುಮಕೂರು:ಅಕ್ರಮ ಭೂ ಕಬಳಿಕೆಗೆ ಕಾರಣವಾಗಿದ್ದಾರೆ ಎಂಬ ಆರೋಪ ಹೊತ್ತಿರುವ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ನಾಗರಿಕ ಸನ್ಮಾನವನ್ನು ಶುಕ್ರವಾರ ಕೆಆರ್‌ಎಸ್ ಪಕ್ಷದ ವತಿಯಿಂದ ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು

ಅಕ್ರಮ ಭೂ ಕಬಳಿಕೆ ಮತ್ತು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಶ್ರಮಿಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಜಿಲ್ಲಾಧಿಕಾರಿಗೆ ಶಾಲು, ಪೇಟ, ರೇಷ್ಮೆ ಸೀರೆ ನೀಡಿ ಸನ್ಮಾನ ಮಾಡಲು ಟೌನ್‌ಹಾಲ್ ನಿಂದ ಡಿಸಿ ಕಚೇರಿ ಕಡೆಗೆ ಹೊರಟಿದ್ದ ಕೆಆರ್‌ಎಸ್ ಪಕ್ಷದ ಸೈನಿಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ಟೌನ್‌ಹಾಲ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸೈನಿಕರು ಪೊಲೀಸರ ಸರ್ಪಗಾವಲಿನ ನಡುವೆಯೂ ಸಭೆ ಸೇರಿದ್ದರು.
ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಕ್ಷಣ ಹೊತ್ತು ವಗ್ವಾದ ನಡೆಯಿತು. ಡಿಸಿಯವರಿಗೆ ಸನ್ಮಾನ ಮಾಡಲು ಅವಕಾಶ ಕೊಡದ ಪೊಲೀಸರ ವರ್ತನೆ ಖಂಡಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟನೆಗೆ ಕುಳಿತು ವಿಡಂಬಿಸುವ ನಿಟ್ಟಿನಲ್ಲಿ‌ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಜೈಕಾರ ಕೂಗಿದರು.

ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧು ಸ್ವಾಮಿ ಮಾತನಾಡಿ, ಅಕ್ರಮ ಭೂ ಮಂಜೂರಾತಿಯು ಡಿಸಿ ಅವರ ಅನುಮತಿ ಇಲ್ಲದೆ ಸಾಧ್ಯವೇ ಇಲ್ಲ. ಇದಕ್ಕೆ ನೇರ ಹೊಣೆಯನ್ನು ಜಿಲ್ಲಾಧಿಕಾರಿಯವರೇ ಹೊರಬೇಕು ಎಂದು ಆರೋಪಿದರು.

ಮಧುಗಿರಿಯಲ್ಲಿನ 40 ಎಕ್ಕರೆ ಅಕ್ರಮ ಭೂ ಮಂಜೂರಾತಿಯಲ್ಲಿ‌ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದರ ವಿರುದ್ಧ ಕೆಆರ್‌ಎಸ್ ಪಕ್ಷ ಹೋರಾಟ ಮಾಡುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸವಾಗುತ್ತಿಲ್ಲ. ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ರಿಯಲ್ ಎಸ್ಟೇಟ್ ಕೆಲಸಗಳು ಮಾತ್ರ ಸರಾಗವಾಗಿ ಆಗುತ್ತಿವೆ. ಅದರೊಂದಿಗೆ ಭೂ ಕಬಳಿಕೆಯೂ ನಡೆಯುತ್ತಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳು ಅಕ್ರಮ ಮಾಡುತ್ತಿದ್ದರೆ ನಾಗರಿಕರು ಅದನ್ನು ನೋಡಿಕೊಂಡು ಸುಮ್ಮನಿಕರಬೇಕಾ ಎಂದು ಜ್ಞಾನ ಸಿಂಧು ಸ್ವಾಮಿ ಪ್ರಶ್ನಿಸಿದರಲ್ಲದೆ, ಸರ್ಕಾರಿ ಭೂಮಿ ಜನರ ಸ್ವತ್ತು. ಅದನ್ನು ಅಕ್ರಮವಾಗಿ ಪರಬಾರೆ ಮಾಡುವುದು ತಪ್ಪು. ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು. ನಾವು ಬಸವಾದಿ ಶರಣರ ಮೊಮ್ಮಕ್ಕಳು‌. ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆದಾಡಿದ ಈ ನೆಲದಲ್ಲಿ ಅಕ್ರಮ ಎಸಗುವುದು ಮಹಾಪರಾಧ ಎಂದು ನುಡಿದರು.

ಕೆಆರ್‌ಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಸನ್ಮಾನ ಮಾಡುವುದು ನಮ್ಮ ಹಕ್ಕು. ಅದನ್ನು ಮಾಡಲು ಹೊರಟಿದ್ದೇವೆ. ಕಳ್ಳರು, ರೌಡಿ ಶೀಟರ್‌ಗಳು ಪೊಲೀಸರಿಗೆ ಸನ್ಮಾನ ಮಾಡುವುದು ಸರಿಯಾದರೆ ಈ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಾದ ನಾವು ಸನ್ಮಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಡಿವೈಎಸ್ಪಿ ಚಂದ್ರಶೇಖರ್ ಅವರನ್ನು ಉದ್ದೇಶಿಸಿ ಕೇಳಿದರು.

ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಜಿಲ್ಲಾಧಿಕಾರಿಗಳ ರಕ್ಷಣೆಗಾಗಿ ಪೊಲೀಸರು ತಮ್ಮ ಸಮಯ‌ ಮತ್ತು ಸಂಪನ್ಮೂಲವನ್ನು ವ್ಯರ್ಥ ಮಾಡುತ್ತಿದ್ದಾರೆ. ಮೆರವಣಿಗೆಗೆಂದು ತಂದಿರುವ ಬ್ಯಾನರ್ ಹಾಗೂ ಶಾಲು, ಪೇಟ ಹಾರಗಳನ್ನು ಕಸಿದುಕೊಂಡಿರುವುದೂ ಅಲ್ಲದೆ, ವಾಕ್ ಸ್ವಾತಂತ್ರವನ್ನು ದಮನ ಮಾಡುವ ನಿಟ್ಟಿನಲ್ಲಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಜಾಣಗೆರೆ ಆರೋಪಿಸಿದರು.

ಡಿಸಿಯವರಿಗೆ ಒತ್ತಡ ಹಾಕಿ ಈ ಅಕ್ರಮವನ್ನು ಮಾಡಿಸಿರಬಹುದು ಅಥವಾ ಆಮಿಷಕ್ಕೆ ಒಳಗಾಗಿಯೂ ಈ ಭ್ರಷ್ಟ ಕೆಲಸಕ್ಕೆ ಕೈ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ‌ ಮಾತನಾಡಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸತ್ಯ ಮೇವ ಜಯತೆಯ ಅರ್ಥವನ್ನು ಮರು ವ್ಯಾಖ್ಯಾನಿಸಿದ್ದಾರೆ. ಸತ್ಯವನ್ನು ನಿತ್ಯ ಮೇಯುವುದೇ ಸತ್ಯ ಮೇವ ಜಯತೆ ಎಂಬುದು ಡಿಸಿಯವರ ಉದ್ಧರಣ. ಸಾರ್ವಜನಿಕ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಬಂದಿರದ ಈ ಅಧಿಕಾರಿ ಜನ ಸೇವೆ ಮಾಡಲು ಸಾಧ್ಯವಿದೆಯೇ? ಮಧುಗಿರಿಯಲ್ಲಿ 40 ಎಕರೆ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಎಂಎಲ್‌ಎ ಮಗನಿಗೆ ಮಂಜೂರು ಮಾಡಿರುವುದರಲ್ಲಿ ಡಿಸಿಯವರ ನೇರ ಪಾತ್ರವಿರುವ ಶಂಕೆ ಇದೆ. ಇವರ ಇವರ ವಿರುದ್ಧ ಕ್ರಮವಾಗಬೇಕು. ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರ ದೌರ್ಜನ್ಯ ಖಂಡಿಸಿ ಸ್ಥಳದಲ್ಲಿಯೇ ಕುಳಿತಿದ್ದ ಪಕ್ಷದ ಕಾರ್ಯಕರ್ತರ ಬಳಿಯಿದ್ದ ಹಾರ ಶಾಲುಗಳನ್ನು ಪೊಲೀಸರು ದಬ್ಬಾಳಿಕೆಯಿಂದ ಕಸಿದುಕೊಳ್ಳುತ್ತಿದ್ದಂತೆಯೇ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿಯವರು ಡಿವೈಎಸ್ಪಿ ಕಾಲಿಗೆ ಬೀಳುವ ಮೂಲಕ ವಿಶಿಷ್ಟ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಲ್ಲರನ್ನೂ ವಶಕ್ಕೆ ತೆಗೆದುಕೊಳ್ಳುವಂತೆ ಡಿವೈಎಸ್ಪಿ ಸೂಚಿಸಿದರು. ಪೊಲೀಸರು ಕೆಆರ್‌ಎಸ್ ಕಾರ್ಯಕರ್ತರನ್ನು ಪೊಲೀಸ್ ವಾಹನಕ್ಕೆ ತುಂಬಿದರು.

ನಂತರ ಬಳ್ಳಾವಿ ಠಾಣೆಗೆ ಕರೆದೊಯ್ದರು ವಾಹನದಿಂದ ಕೆಳಗಿಳಿಯಲು ನಿರಾಕರಿಸಿದ ಕಾರ್ಯಕರ್ತರು ಡಿಸಿ ಕಚೇರಿಗೆ ಕರೆದೊಯ್ಯುವಂತೆ ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷರಾದ ಜ್ಞಾನ ಸಿಂಧು ಸ್ವಾಮಿ ಸರಕಾರ ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಅಥವಾ ಸಿಕ್ಕಸಿಕ್ಕ ಸ್ಥಳದಲ್ಲಿ ನಮ್ಮ ಕಾರ್ಯಕರ್ತರು ಡಿಸಿ ಅವರಿಗೆ ಸನ್ಮಾನ ಮಾಡುವುದಾಗಿ ಸವಾಲನ್ನು ಹಾಕಿದರು. ನ್ಯಾಯಾಂಗ ತೆನಿಖೆಗೆ ಒಪ್ಪಿಸಬೇಕೆಂದು ಸಹ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ಯ ಬಿ ಎಸ್ ಜಿಲ್ಲಾಧಿಕಾರಿ ಶುಭ ಕಲ್ಯಾಣ ವಿರುದ್ಧ ದೂರು ನೀಡಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಎಲ್. ಜೀವನ್, ರಘು ನಂದನ, ಆರೋಗ್ಯ ಸ್ವಾಮಿ, ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್, ರಾಜ್ಯ ಎಸ್. ಸಿ ಎಸ್ ಟಿ ಘಟಕದ ಕಾರ್ಯದರ್ಶಿಗಳಾದ ನರಸಿಂಹರಾಜು ಸಿ ಎನ್, ಚೆನ್ನಯ್ಯ, ಅನುಸ್ವಾಮಿ ಪಕ್ಷದ ಮಹಿಳಾ ಘಟಕದ ಸದಸ್ಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here