ವಿಜಯಪುರ : ವಿಜಯಪುರ ಜಿಲ್ಲೆಯನ್ನು 371 ಜೆ ಕಲಂ ಅಡಿ ಬಿಟ್ಟು ಹೋದ ಪ್ರದೇಶವೆಂದು ಪರಿಗಣಿಸಿ ಕಲ್ಯಾಣ ಕರ್ನಾಟಕ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟ ವಿಜಯಪುರ ಪದಾಧಿಕಾರಿಗಳು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಹಾಗೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟ ಅಧ್ಯಕ್ಷರಾದ ಲಾಯಪ್ಪ ಇಂಗಳೆ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆ ರಾಜಾಡಳಿತ ಕಾಲದಲ್ಲಿ ಹೈದ್ರಾಬಾದ್ ನಿಜಾಮನ ಆಡಳಿತದಲ್ಲಿತ್ತು ಎಂಬುವುದಕ್ಕೆ ಸರ್ಕಾರದಿಂದ ಪ್ರಕಟಗೊಂಡ ಗೆಜಿಟಿಯರ್ನಲ್ಲಿ ದಾಖಲಾಗಿದೆ. ಕ್ರಿ.ಶÀ. 1744 ರಲ್ಲಿ ಹೈದ್ರಾಬಾದಿನ ನಿಜಾಮನು ಕೃಷ್ಣೆಯ ಉತ್ತರದ ಭಾಗದ ಆಡಳಿತದ ಹೊಣೆಯನ್ನು ನಾಶಿರ ಜಂಗನಿಗೂ, ದಕ್ಷಿಣದ ಬಾದಾಮಿ ಬಾಗಲಕೋಟೆ ಗ್ರಾಮದ ಸವಣೂರಿನ ನವಾಬನ ಆಡಳಿಕ್ಕೆ ನೀಡಿದ್ದ ಕ್ರಿ.ಶ. 1746 ರಲ್ಲಿ ಸವಣೂರಿನ ನವಾಬನು ಮರಾಠಾ ಪೇಶ್ವೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸದರಿ ಪ್ರದೇಶಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದರ ಕುರಿತು ಅಧಿಕೃತ ದಾಖಲೆಗಳಿದ್ದರೂ ಅಖಂಡ ವಿಜಯಪುರ ಜಿಲ್ಲೆಯನ್ನು ಸೇರಿಸದೆ ತಮಗೆ ರಾಜಕೀಯ ಅಧಿಕಾರ ನೀಡಿದ ಜಿಲ್ಲೆಗೆ ಘೋರ ಅನ್ಯಾಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣರ ಚಾಲುಕ್ಯರ ಕಾಲದಿಂದ ವಿಜಯಪುರ ಜಿಲ್ಲೆ ಕಲ್ಯಾಣ ನಾಡಿನಲ್ಲಿಯೇ ಇತ್ತು. ಈಗಾಗಲೇ ಸಾರಿಗೆ ವ್ಯವಸ್ಥೆ , ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಡಿ ಇದೆ. ನ್ಯಾಯಾಂಗ ವ್ಯವಸ್ಥೆ ಕೂಡಾ ಕಲ್ಬುರ್ಗಿ ಉಚ್ಛ ನ್ಯಾಯಾಲಯದಡಿ ಬರುತ್ತದೆ. ಹೀಗಿದ್ದರೂ ಕೂಡ. ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದಡಿ ಸೇರಿಸದೆ ಇರುವುದು ಐತಿಹಾಸಿಕ ಪ್ರಮಾದವಾಗಿದೆ. ನಿಜಾಮನ ಆಡಳಿತದಲ್ಲಿ ಇಲ್ಲದೆ ಇರುವ ಬಳ್ಳಾರಿ ಜಿಲ್ಲೆಯನ್ನು (ವಿಜಯನಗರ ಸೇರಿ) 371 ಜೆ ಮೀಸಲಾತಿಯಡಿ ಸೇರಿಸಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆ ಕೂಡಾ ಹಿಂದುಳಿದ ಪ್ರದೇಶವಾಗಿದ್ದು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಇಲ್ಲಿನ ಜನಸಮೂಹವು ಅತ್ಯಂತ ಹಿಂದುಳಿದಿರುತ್ತಾರೆ ಎಂದು ಹೇಳಿದರು.
ಪದವಿಧರ ಒಕ್ಕೂಟದ ಕಾರ್ಯದರ್ಶಿ ಕಲ್ಲಪ್ಪ ಶಿವಶರಣ ಮಾತನಾಡಿ, ಜಿಲ್ಲೆಗೆ ಆದ ಅನ್ಯಾಯದ ಕುರಿತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಪದವೀಧರರ ಒಕ್ಕೂಟದಿಂದ ಧ್ವನಿ ಎತ್ತಿದಾಗ ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪ್ರಣಾಳಿಕೆಯಲ್ಲಿ ಜಿಲ್ಲೆಯನ್ನು ಮೀಸಲಾತಿಯಡಿ ಸೇರಿಸುವ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾರೊಬ್ಬರು ಕೂಡ ಮೀಸಲಾತಿ ಬಗ್ಗೆ ಧ್ವನಿ ಎತ್ತದೆ ರಾಜಕೀಯ ಹಿತಾಸಕ್ತಿಗಾಗಿ ಜಿಲ್ಲೆಯ ಮಕ್ಕಳಿಗೆ ಸಿಗಬೇಕಾದ ಪ್ರತಿಶತ 80 % ಶೈಕ್ಷಣಿಕ ಮೀಸಲಾತಿ ಹಾಗೂ ಸ್ಥಳೀಯ ಸರ್ಕಾರಿ ಉದ್ಯೋಗದಲ್ಲಿ ಪ್ರತಿಶತ 80 ರಷ್ಟು ಹುದ್ದೆಗಳಿಂದ ಜಿಲ್ಲೆಯ ಯುವ ಜನ ಕಳೆದ 10 ವರ್ಷದಿಂದ ವಂಚಿತರಾಗುತ್ತಿದ್ದಾರೆ.ಎಂದು ಹೇಳಿದ ಅವರು ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರ ರಾಜಕೀಯ ಹಿತಾಸಕ್ತಿಯನ್ನು ಬಿಟ್ಟು ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
Home ಸಾರ್ವಜನಿಕ ಧ್ವನಿ ವಿಜಯಪುರ ಜಿಲ್ಲೆಗೆ 371ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ಜಾರಿಗೊಳಿಸಲು ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟದಿಂದ ಆಗ್ರಹ