ಬೆಂಗಳೂರು:ಕೆನರಾ ಬ್ಯಾಂಕಿನಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ದಾವಣಗೆರೆ ಜಿಲ್ಲೆ ಜಗಳೂರಿನ ಶ್ರೀ ಎನ್ ಟಿ ಎರ್ರಿಸ್ವಾಮಿ ಅವರು ತಮ್ಮ ಬ್ಯಾಂಕಿಂಗ್ ಅನುಭವಗಳ ಹಿನ್ನೆಲೆಯಲ್ಲಿ ರಚಿಸಿರುವ
“ಬ್ಯಾಂಕಾಯಣ ” ಕೃತಿ ಇದೇ ಬರುವ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಕೆನರಾ ಬ್ಯಾಂಕ್ ಎಸ್ಸಿ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ತನ್ನ ” ಜೈ ಭೀಮ್ ” ಭವನದಲ್ಲಿ ಅಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೆ ವ್ಯವಸ್ಥೆ ಮಾಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಶೋಕ್ ಚಂದ್ರ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಹೃದ್ರೋಗ ತಜ್ಞರಾದ ಡಾ. ಬಿ. ಎಚ್ .ನಟೇಶ್ ರವರು, ಕೆನರಾ ಬ್ಯಾಂಕಿನ ಮಹಾ ಪ್ರಬಂಧಕರಾದ ಶ್ರೀ ಮಹೇಶ್ ಪೈ, ಶ್ರೀ ರಾಮನಾಯ್ಕ, ಶ್ರೀ ಗೋಪಿಕೃಷ್ಣ ,ಪತ್ರಕರ್ತರಾದ ಶ್ರೀಮತಿ ಮಂಜುಶ್ರೀ ಕಡಕೋಳ
ರವರು ಭಾಗವಹಿಸಲಿದ್ದಾರೆ. ಸೊರಬದ ನೇಕಾರ ಪ್ರಕಾಶನ ಕೃತಿಯನ್ನು ಹೊರ ತರುತ್ತಿದೆ. ಕಾರ್ಯಕ್ರಮದಲ್ಲಿ ಕೃತಿಕಾರರಾದ ಶ್ರೀ ಎನ್. ಟಿ. ಎರ್ರಿಸ್ವಾಮಿ ಮತ್ತು ಪ್ರಕಾಶಕರಾದ ಶ್ರೀ ರಾಮಕೃಷ್ಣರವರು ಉಪಸ್ಥಿತರಿರುವರು ಎಂದು ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ದಾಸ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.